ಪೆರ್ನೆಯಲ್ಲಿ ಭೀಕರ ಅಗ್ನಿ ದುರಂತ ಗ್ಯಾಸ್‌ ಟ್ಯಾಂಕರ್‌ಗೆ ಬೆಂಕಿ : 8 ಮಂದಿ ಸಜೀವ ದಹನ


KNN, 09-04-2013 19:32:52


Write Comment     |     E-Mail To a Friend     |     Facebook     |     Twitter     |     Print


`1

2

3

4

5

6

7

7

90

223

W1W

SQS

AASs

ADSA

 


ಪೆರ್ನೆ ಅಗ್ನಿ ದುರಂತಕ್ಕೆ ಸುಟ್ಟು ಕರಕಲಾಗಿರುವ ಮನೆ ಮತ್ತು ಸುತ್ತಲಿನ ಪರಿಸರದ ಭೀಕರ ಚಿತ್ರಣ.

 

ಚಿತ್ರಗಳು: ಪದ್ಮಾ ಸ್ಟುಡಿಯೋ, ಪುತ್ತೂರು

ಉಪ್ಪಿನಂಗಡಿ : ಜಿಲ್ಲೆಯ ಇತಿಹಾಸದಲ್ಲಿಯೇ ಭೀಕರವೆನ್ನಲಾದ ಗ್ಯಾಸ್‌ ಟ್ಯಾಂಕರ್‌ ಅಗ್ನಿ ದುರಂತ ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದ್ದು, ಟ್ಯಾಂಕರ್‌ ಚಾಲಕ ಸಹಿತ 8 ಮಂದಿ ಬಲಿಯಾಗಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.

ಬಲಿಯಾದವರು ಮತ್ತು ಗಾಯಗೊಂಡವರು ಸ್ಥಳೀಯರು (ಟ್ಯಾಂಕರ್‌ ಚಾಲಕನ ಹೊರತು). ಟ್ಯಾಂಕರ್‌ನಿಂದ ಹೊರಬಂದ ಅಗ್ನಿ ಜ್ವಾಲೆಯ ಪರಿಣಾಮದಿಂದ ಈ ಘಟನೆ ಸಂಭವಿಸಿತು.

ಘಟನೆಯಲ್ಲಿ ಒಂದು ಗ್ಯಾರೇಜ್‌, ಎರಡು ಅಂಗಡಿಗಳು ಮತ್ತು ಐದು ಮನೆಗಳು ಧ್ವಂಸಗೊಂಡಿವೆ. ಟ್ಯಾಂಕರ್‌ ಸೇರಿದಂತೆ 407 ವಾಹನ, ಮಾರುತಿ ಆಮ್ನಿ, ಒಂದು ಸ್ಕೂಟರ್‌, ಒಂದು ಬೈಕ್‌, ಹಾಗೂ ಒಂದು ಎಂ-80 ವಾಹನ ಸುಟ್ಟು ಹೋಗಿದೆ.

ಮೃತರ ವಿವರ

ಪೆರ್ನೆ ಗ್ರಾಮ ನಿವಾಸಿ ಬಟ್ಯ ನಾಯ್ಕ ಅವರ ಮಗ ಟೈಲರ್‌ ವೃತ್ತಿ ನಿರ್ವಹಿಸುತ್ತಿದ್ದ ಗುರುವಪ್ಪ (30), ಪೆರ್ನೆ ಗ್ರಾಮ ನಿವಾಸಿ ಶಂಕರ ರೈ ಅವರ ಪತ್ನಿ ಶೋಭಾ (45) ಪೆರ್ನೆ ಗ್ರಾಮ ನಿವಾಸಿ ನಾರಾಯಣ ನಾಯ್ಕ ಅವರ ಮಗ ಚೈತ್ರೇಶ್‌ (5), ನಾರಾಯಣ ನಾಯ್ಕ ಅವರ ಪತ್ನಿ ವನಿತಾ (38), ಸೀತಾರಾಮ ನಾಯ್ಕ ಅವರ ಪುತ್ರ ಸುನಿಲ್‌ (5), ಮಹಮ್ಮದ್‌ ಅವರ ಪತ್ನಿ ಖತೀಜಮ್ಮ (40) ಹಾಗೂ ಟ್ಯಾಂಕರ್‌ ಚಾಲಕ ಸೆಲ್ವರಸು (32), ಆಮ್ನಿ ಚಾಲಕ ವಸಂತ (35) ಮೃತಪಟ್ಟವರು. ಖತೀಜಮ್ಮ ಮತ್ತು ವಸಂತ ಅವರನ್ನು ಸುಟ್ಟ ಗಾಯಗಳೊಂದಿಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫ‌ಲಕಾರಿಯಾಗದೆ ಅವರು ಅಲ್ಲಿ ಮೃತಪಟ್ಟರು.

ಗಾಯಾಳುಗಳಾದ ಇಂದಿರಾ, ಅಂಗನವಾಡಿ ಕಾರ್ಯಕರ್ತೆ ವಿಮಲಾ, ಸಫಿಯಾ ಮತ್ತು ಅಜ್ಮಾ ಪುತ್ತೂರು ಮತ್ತು ಮಂಗಳೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಸಂತ ಹೊರತಾಗಿ ಉಳಿದವರೆಲ್ಲರೂ ಪೆರ್ನೆ ಗ್ರಾಮ ನಿವಾಸಿಗಳು.

ಈ ಘಟನೆಯಿಂದ ಉಮ್ಮರಬ್ಬ ಅವರ ಅಂಗಡಿ ಸುಟ್ಟು ಹೋಗಿದೆ. ಇಸ್ಮಾಯಿಲ್‌ ಅವರ ಅಂಗಡಿ ಮತ್ತು ಮನೆ, ನಾರಾಯಣ ನಾಯ್ಕ ಅವರ ಮನೆ, ಸುಂದರ ರೈ ಅವರಿಗೆ ಸೇರಿದ ಗ್ಯಾರೇಜ್‌, ಸುಂದರ ರೈ ಅವರ ಮನೆ, ಅಬೂಬಕ್ಕರ್‌ ಅವರ ಮನೆ, ಮಹಮ್ಮದ್‌ ಅವರ ಮನೆ ಬೆಂಕಿಗೆ ಆಹುತಿಯಾಗಿವೆ. ಈ ಘಟನೆಯಿಂದ ಆಗಿರುವ‌ ಒಟ್ಟು ನಷ್ಟ 30 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ವಿಟ್ಲ ನಾಡ ಕಚೇರಿಯ ಉಪ ತಹಶೀಲ್ದಾರ್‌ ಮತ್ತು ಪೆರ್ನೆ ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಪ್ರಮಾಣವನ್ನು ಅಂದಾಜಿಸಿದ್ದಾರೆ.

ಸಿನಿಮೀಯ ರೀತಿಯ ಘಟನೆ

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಗ್ಯಾಸ್‌ ಟ್ಯಾಂಕರ್‌ ಪೆರ್ನೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಅಡ್ಡ ಬಿತ್ತು. ಟ್ಯಾಂಕರ್‌ನ ನೆಕ್‌ ಡಾಮರಿಗೆ ಉಜ್ಜಿ ಹೋದ ಪರಿಣಾಮ ಉಂಟಾದ ಬೆಂಕಿಯ ಕಿಡಿ ಗ್ಯಾಸ್‌ ಸಹಿತ ಇಡಿ ಪರಿಸರಕ್ಕೆ ಬೆಂಕಿ ವ್ಯಾಪಿಸುವಂತೆ ಮಾಡಿತು. ಆಕಸ್ಮಿಕ ಮತ್ತು ಅಪಾಯಕಾರಿ ಘಟನೆಯಿಂದ ತಪ್ಪಿಸಿಕೊಳ್ಳಲಾಗದೆ ಮನೆಗಳಲ್ಲಿ ಮತ್ತು ಅಂಗಡಿಗಳಲ್ಲಿ ಇದ್ದವರು ಮೃತಪಟ್ಟರು, ಕೆಲವರು ಸುಟ್ಟ ಗಾಯಕ್ಕೊಳಗಾದರು.

10 ಗಂಟೆಗೆ ಟ್ಯಾಂಕರ್‌ ಅಡ್ಡ ಬಿದ್ದಿದೆ. 5 ನಿಮಿಷಗಳೊಳಗೆ ಪರಿಸರದಲ್ಲಿ ಬೆಂಕಿ ಸಹಿತ ಗ್ಯಾಸ್‌ ವ್ಯಾಪಿಸಿ ಮನೆ, ಅಂಗಡಿಗಳನ್ನು ಸುಟ್ಟು ಭಸ್ಮ ಮಾಡಿತು. ತತ್‌ಕ್ಷಣ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಪುತ್ತೂರು ಅಗ್ನಿ ಶಾಮಕ ದಳದವರು ಮೊದಲು ಸ್ಥಳಕ್ಕೆ ಆಗಮಿಸಿದರೆ ಅನಂತರ ಜಿಲ್ಲೆಯ ಮಂಗಳೂರು, ಕದ್ರಿ, ಬಂಟ್ವಾಳ ಮತ್ತು ಬೆಳ್ತಂಗಡಿಗಳಿಂದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬಂದವು. ನಿರಂತರ ನೀರು ಹಾಯಿಸುವ ಮೂಲಕ ಅಗ್ನಿ ಜ್ವಾಲೆಯನ್ನು ನಿಯಂತ್ರಣಕ್ಕೆ ತರಲಾಯಿತಾದರೂ ಭೀಕರವಾಗಿ ವ್ಯಾಪಿಸಿದ ಅಗ್ನಿ ಜ್ವಾಲೆಗಳು ಮಾನವ ಜೀವ ಮತ್ತು ಅಪಾರ ಸೊತ್ತುಗಳನ್ನು ಬಲಿ ತೆಗೆದುಕೊಂಡವು.

ಮಂಗಳೂರಿನಿಂದ ಬೇಕರಿ ಸಾಮಗ್ರಿಗಳ ಮಾರಾಟಕ್ಕಾಗಿ ಬಂದಿದ್ದ ಕಂಪೆನಿಯೊಂದರ ವ್ಯಾನ್‌, ಕಲ್ಲಡ್ಕದಿಂದ ಬೇಕರಿ ಸೊತ್ತುಗಳನ್ನು ಮಾರಾಟ ಮಾಡಲು ಬಂದಿದ್ದ ಮಾರುತಿ ಆಮ್ನಿ ವಾಹನ, ಪುತ್ತೂರಿನಿಂದ ಬೇಕರಿಯೊಂದರ ಸೊತ್ತುಗಳನ್ನು ಮಾರಾಟಕ್ಕೆ ತಂದಿದ್ದ ಎಂ-80 ವಾಹನ ಅಂಗಡಿಗಳ ಮುಂದೆ ನಿಂತಿದ್ದವು. ಕ್ಷಣ ಮಾತ್ರದಲ್ಲಿ ವ್ಯಾಪಿಸಿದ ಬೆಂಕಿ ಈ ವಾಹನಗಳನ್ನು ತನಗೆ ಆಹುತಿ ತೆಗೆದುಕೊಂಡಿತು.

ಪೆರ್ನೆ ಗ್ರಾಮ ನಿವಾಸಿ ಶಂಕರ್‌ ರೈ ಅವರ ಪತ್ನಿ ಶೋಭಾ ಬಟ್ಟೆ ಒಗೆಯುತ್ತಿದ್ದರು. ಮನೆಗೆ ಹಠಾತ್‌ ವ್ಯಾಪಿಸಿದ ಬೆಂಕಿಯ ಜ್ವಾಲೆಗೆ ಅವರು ಸ್ಥಳದಲ್ಲೇ ಬಲಿಯಾದರು. ಅವರಂತೆ ಮನೆಯಲ್ಲಿದ್ದ ನಾರಾಯಣ ನಾಯ್ಕ ಅವರ ಪತ್ನಿ ವನಿತಾ, ಅವರ ಪುತ್ರ ಚೈತ್ರೇಶ್‌, ಆತನ ಗೆಳೆಯ ಸುನಿಲ್‌ ಕ್ಷಣ ಮಾತ್ರದಲ್ಲಿ ಬೆಂಕಿಯ ಜ್ವಾಲೆ ಪಸರಿಸಿ ಸುಟ್ಟು ಕರಕಲಾದರು. ಟೈಲರ್‌ ವೃತ್ತಿ ನಿರ್ವಹಿಸುತ್ತಿದ್ದ ಗುರುವಪ್ಪ ಕೂಡ ತನ್ನ ಅಂಗಡಿಯಲ್ಲಿಯೇ ಭಸ್ಮವಾದರು. ಟ್ಯಾಂಕರ್‌ ಚಾಲಕ ಸ್ಥಳದಲ್ಲೇ ಸುಟ್ಟು ಕರಕಲಾದರು.

ಈ ಹೃದಯ ವಿದ್ರಾವಕ ಘಟನೆಯಿಂದ ಪೆರ್ನೆ ಗ್ರಾಮವೇ ಆತಂಕಿತಗೊಂಡಿತು. ಮೃತರ ಬಂಧುಗಳ ಆರ್ತನಾದ ಕೇಳಿ ಮರುಗಿ ಬೆಂಕಿಯ ಆಟದ ಮುಂದೆ ಯಾರೂ ಏನೂ ಮಾಡಲು ಸಾಧ್ಯವಿರಲಿಲ್ಲ. ಯಾಕೆಂದರೆ ಅಗ್ನಿಯ ಭೀಕರತೆ ಅಷ್ಟೊಂದು ಪ್ರಮಾಣದಲ್ಲಿತ್ತು.

ಕಲ್ಲಡ್ಕದ ಮಾರುತಿ ಆಮ್ನಿ ಚಾಲಕ ವಸಂತ ಸುಟ್ಟ ಗಾಯಗಳೊಂದಿಗೆ ಹೊರಗೋಡಿ ಬಂದು ಸ್ವಲ್ಪ ದೂರದಲ್ಲಿ ಕುಸಿದು ಬಿದ್ದರು. ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಯಿತು. ಅದೇ ರೀತಿ ತಮ್ಮ ಮನೆಯೊಳಗಿದ್ದ ಖತೀಜಮ್ಮ, ಸಫಿಯಾ, ಆಜ್ಮಾ, ವಿಮಲಾ ಮತ್ತು ಇಂದಿರಾ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಸ್ಥಿತಿಯಲ್ಲಿ ಹೊರತರಲಾಯಿತು. ವಸಂತ ಮತ್ತು ಖತೀಜಮ್ಮ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಬೇಕರಿ ಸಾಮಗ್ರಿ ಮಾರಾಟಕ್ಕಾಗಿ ಎಂ-80 ವಾಹನದಲ್ಲಿ ಬಂದಿದ್ದ ತಮಿಳುನಾಡು ಮೂಲದ ಪುತ್ತೂರು ನಿವಾಸಿ ಕುಮಾರ ಬೆಂಕಿ ತಮ್ಮತ್ತ ಬರುತ್ತಿದ್ದಂತೆ ಓಡಿ ತಪ್ಪಿಸಿಕೊಂಡರು. ಒಂದು ನಿಮಿಷ ತಡವಾಗುತ್ತಿದ್ದರೆ ನಾನು ಕೂಡ ದುರಂತಕ್ಕೆ ಬಲಿಯಾಗುತ್ತಿದ್ದೆ ಎಂದು ತಮ್ಮ ಅನುಭವವನ್ನು ಪತ್ರಕರ್ತರೊಂದಿಗೆ ವಿವರಿಸಿದರು.

ಸಾರ್ವಜನಿಕರ ಸಹಕಾರ

ಪರಿಹಾರ ಕಾರ್ಯದಲ್ಲಿ ಮುಂದಾದ ಸಾರ್ವಜನಿಕರು ಅಗ್ನಿ ಶಾಮಕ ದಳದವರಿಗೆ ಮತ್ತು ಪೊಲೀಸರಿಗೆ ಸಹಕರಿಸಿದರು. ಮನೆಯೊಳಗಿದ್ದ ಗ್ಯಾಸ್‌ ಸಿಲಿಂಡರ್‌ಗಳನ್ನು ಹೊರಗೆ ತಂದು ಎಸೆಯುವ ಮೂಲಕ ಭೀಕರ ಸ್ಫೋಟವನ್ನು ತಪ್ಪಿಸಿದರು.

 

ನವವಿವಾಹಿತ ವಸಂತ
 
ಬೇಕರಿ ಉತ್ಪನ್ನಗಳನ್ನು ಅಮ್ನಿಯಲ್ಲಿ ಮಾರಾಟ ಮಾಡುತ್ತಿದ್ದ ವಸಂತ ಅವರು ಪರಿಶ್ರಮಿ. 6 ತಿಂಗಳ ಹಿಂದೆಯಷ್ಟೆ ಮದುವೆಯಾಗಿತ್ತು. ವಿಧಿ ಈ ರೀತಿ ಮಾಡಿತಲ್ಲಾ ಎಂದು ಅವರ ಭಾವ ಆಸ್ಪತ್ರೆಯಲ್ಲಿ ರೋದಿಸುತ್ತಿದ್ದರು.

ಸಾಲಸೋಲ ಮಾಡಿ ತಂಗಿಯ ಮದುವೆ ಮಾಡಿದ್ದೇವೆ. ಆ ಸಾಲ ಇನ್ನೂ ತೀರಿಲ್ಲ, ಭಾವನ ಸ್ಥಿತಿ ಹೀಗಾಯಿತು ಎಂದವರು ಬಿಕ್ಕಿಬಿಕ್ಕಿ ಆಳುತ್ತಿದ್ದರು. ತೀವ್ರ ಗಾಯಗೊಂಡಿದ್ದ ವಸಂತ ಅವರನ್ನು ಜೀವನ್ಮರಣ ಸ್ಥಿತಿಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಂದಿನಂತೆ ಮಾರುತಿ ಆಮ್ನಿಯಲ್ಲಿ ಬೇಕರಿ ಉತ್ಪನ್ನಗಳ ಲೈನ್‌ಸೇಲ್‌ಗೆ ಹೋಗುತ್ತಿದ್ದ ವಸಂತ ಅವರಿಗೆ ಗ್ಯಾಸ್‌ ಟ್ಯಾಂಕರ್‌ ವಿಧಿಯಾಗಿ ಕಾಡಿತ್ತು.

ಮೀಟಿಂಗ್‌ಗೆ ಹೋಗುತ್ತಿದ್ದರು...

ದುರಂತದಲ್ಲಿ ಗಾಯಗೊಂಡಿರುವ ಅಂಗನವಾಡಿ ಶಿಕ್ಷಕಿ ವಿಮಲಾ ಅವರು ಮೀಟಿಂಗ್‌ಗೆ ತೆರಳುತ್ತಿದ್ದರು. ಬಸ್‌ನಲ್ಲಿ ಹೋಗಲು ಬಂದವರು ಅಲ್ಲೆ ಮಾರ್ಗದ ಸಮೀಪ ಇದ್ದ ಇಂದಿರಾ ಅವರ ಮನೆಗೆ ಮಾತನಾಡಲು ತೆರಳಿದ್ದರು. ಇಂದಿರಾ ಅವರು ಬೀಡಿಕಟ್ಟುವ ಕಾಯಕ ಮಾಡುತ್ತಿದ್ದಾರೆ. ಅದೇ ವೇಳೆಗೆ ವಿಧಿ ಗ್ಯಾಸ್‌ ಟ್ಯಾಂಕರ್‌ ರೂಪದಲ್ಲಿ ಅವರನ್ನು ಕಾಡಿದೆ. ಇಂದಿರಾ ಹಾಗೂ ವಿಮಲಾ ಅವರು ಗಂಭೀರ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುನಾಮಿಯಂತೆ ಬೆಂಕಿ ಮುನ್ನುಗ್ಗಿತ್ತು...

ಮಂಗಳೂರು : ನೀರು ತರಲೆಂದು ಮನೆಯ ಹೊರಭಾಗಕ್ಕೆ ಹೋದದ್ದಷ್ಟೆ. ಆವಾಗಲೇ ಎಂದೂ ಕೇಳರಿಯದ ದೊಡ್ಡ ಶಬ್ದ ಕಿವಿಗೆ ಅಪ್ಪಳಿಸಿತು. ಅತ್ತಿತ್ತ ಭಯದಿಂದ ನೋಡುವಾಗಲೆ ಸುನಾಮಿಯಂತೆ ಬೆಂಕಿಯ ಕೆನ್ನಾಲಗೆ ಒಮ್ಮೆಗೆ ನನ್ನನ್ನೂ ಮುತ್ತಿಬಿಟ್ಟಿತು.....ಸರಿ ಸುಮಾರು 75 ವರ್ಷದ ಖತೀಜಮ್ಮ ಅವರಿಗೆ ಗೊತ್ತಿರುವುದು ಇಷ್ಟೆ.

ಗ್ಯಾಸ್‌ ಟ್ಯಾಂಕರ್‌ ಪಲ್ಟಿಯಾದ ಹತ್ತಿರದಲ್ಲೇ ಇದ್ದ ಖತೀಜಮ್ಮ ಅವರ ಮನೆಯಲ್ಲಿ ಅವರೂ ಸೇರಿ ಮೂವರಿದ್ದರು. ಆದರೆ, ಬೆಂಕಿಯ ಕೆನ್ನಾಲಗೆಯನ್ನು ಕಂಡು ಬೆಚ್ಚಿಬಿದ್ದ ಮನೆಯಲ್ಲಿದ್ದ ಇಬ್ಬರು ಸೊಸೆಯಂದಿರು ದಿಕ್ಕಾಪಾಲಾಗಿ ಓಡಿದ್ದರು. ಅಜ್ಜಿಗೂ ಬೆಂಕಿ ಆವರಿಸಿದ್ದು ತತ್‌ಕ್ಷಣಕ್ಕೆ ಸೊಸೆಯಂದಿರಿಗೆ ಗೊತ್ತಾಗಲಿಲ್ಲ. ಬೆಂಕಿಯ ತಾಪ ಕಡಿಮೆಯಾದ ಬಳಿಕ ವಾಪಸು ಬಂದ ಸೊಸೆಯಂದಿರು ಅಜ್ಜಿಯನ್ನು ಮಂಗಳೂರಿಗೆ ವೆನಾÉಕ್‌ ಆಸ್ಪತ್ರೆಗೆ ಕರೆತರಲಾಯಿತು. ಅಜ್ಜಿಯ ಎರಡೂ ಕೈಗಳು ಮತ್ತು ಬೆನ್ನು ಬೆಂಕಿಯ ಕೆನ್ನಾಲಿಗೆಗೆ ಬೆಂದಿದೆ. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭೀಕರ ಅಪಘಾತ

ರಾ.ಹೆ. 75ರಲ್ಲಿ ಮಾಣಿ - ಉಪ್ಪಿನಂಗಡಿ - ಶಿರಾಡಿ ನಡುವೆ ಗ್ಯಾಸ್‌ ಟ್ಯಾಂಕರ್‌ಗಳು ಅವಘಡಕ್ಕೆ ಈಡಾಗುತ್ತಲೇ ಇರುತ್ತವೆ. ಈ ಘಟನೆ ಸಂಭವಿಸಿದಾಗ ಚಾಲಕ, ಕ್ಲೀನರ್‌ಗಳ ಸಾವು ಅಥವಾ ಟ್ಯಾಂಕರ್‌ಗಳಲ್ಲಿ ಗ್ಯಾಸ್‌ ಸೋರಿಕೆ ನಡೆದ ಉದಾಹರಣೆಗಳಿವೆ. ಆದರೆ ಮಂಗಳವಾರ ಪೆರ್ನೆಯಲ್ಲಿ ಸಂಭವಿಸಿದ ಗ್ಯಾಸ್‌ ಟ್ಯಾಂಕರ್‌ ದುರಂತ ಮಾತ್ರ ಟ್ಯಾಂಕರ್‌ ಅಪಘಾತಗಳ ಇತಿಹಾಸದಲ್ಲಿಯೇ ಅತ್ಯಂತ ಭೀಕರ ಅಪಘಾತವೆನ್ನಬಹುದು.

ಮಕ್ಕಳು ಪಾರಾದರು

ಮಂಗಳವಾರ ಸಂಭವಿಸಿದ ಗ್ಯಾಸ್‌ ಟ್ಯಾಂಕರ್‌ ಅಗ್ನಿ ಆಕಸ್ಮಿಕದಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಇತರ ಮನೆಗಳಲ್ಲಿ ಇದ್ದ ಮಕ್ಕಳು ಶಾಲೆಗೆ ಹೋದ ಕಾರಣ ಈ ದುರಂತದ ದವಡೆಯಿಂದ ಪಾರಾದರು. ಶಂಕರ್‌ ರೈ ಅವರ ಇಬ್ಬರು ಮಕ್ಕಳು ಕೂಡ ಶಾಲೆಗೆ ಹೋಗಿದ್ದರು. ಇತರ ಮನೆಗಳಲ್ಲಿದ್ದ ಮಕ್ಕಳು ಮತ್ತು ಪುಟಾಣಿಗಳು ಶಾಲೆ ಮತ್ತು ಅಂಗನವಾಡಿಗಳಿಗೆ ತೆರಳಿದ ಕಾರಣ ಇವರು ಬಲಿಯಾಗುವುದು ತಪ್ಪಿದಂತಾಗಿದೆ. ಶಂಕರ್‌ ರೈ ಅವರ ಅಣ್ಣನ ಪತ್ನಿ ಇಂದಿರಾ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಇವರು ಘಟನೆ ಸಂಭವಿಸುವಾಗ ತಮ್ಮ ಮನೆಯ ಅನತಿ ದೂರದಲ್ಲಿರುವ ಅಂಗಡಿಯಲ್ಲಿದ್ದರು.

ಜಿಲ್ಲಾಧಿಕಾರಿಗೆ ಸೂಚನೆ

ದುರಂತದ ಸ್ಥಳಕ್ಕೆ ಭೇಟಿ ನೀಡಿದ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ಸಂತ್ರಸ್ತರನ್ನು ಸಂತೈಸಿ ದ.ಕ. ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಸಂತ್ರಸ್ತರಿಗೆ ತುರ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸುವಂತೆ ಸೂಚಿಸಿದರು.

ಶಾಸಕಿ ಮಲ್ಲಿಕಾ ಪ್ರಸಾದ್‌, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ, ಬಿಜೆಪಿ ಮುಂದಾಳು ಸಂಜೀವ ಮಠಂದೂರು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರನ್ನು ಸಂತೈಸಿದರು.

ಅಗ್ನಿಶಾಮಕ ಸೇವಾ ಇಲಾಖೆಯ ಮುಖ್ಯ ಶಾಮಕ ಅಧಿಕಾರಿ ವರದರಾಜು, ಪುತ್ತೂರು ನಗರ ಪೊಲೀಸ್‌ ಇನ್ಸ್‌ಪೆಕ್ಟರ್‌ ಎಂ. ಸುದರ್ಶನ, ಪುತ್ತೂರು ಗ್ರಾಮಾಂತರ ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ. ಸುರೇಶ್‌ ಕುಮಾರ್‌ ಹಾಗೂ ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ಉಪ್ಪಿನಂಗಡಿ, ಬಂಟ್ವಾಳ ಗ್ರಾಮಾಂತರ, ಪುಂಜಾಲಕಟ್ಟೆ ಪೊಲೀಸ್‌ ಠಾಣಾಧಿಕಾರಿಗಳು ಮತ್ತು ಸಿಬಂದಿ ಪರಿಹಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಪುತ್ತೂರು ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2008 ಪೆರಿಯ ಶಾಂತಿಯಲ್ಲಿ ಸಂಭವಿಸಿದ ದುರಂತ

ಉಪ್ಪಿನಂಗಡಿ : ರಾಷ್ಟ್ರೀಯ ಹೆದ್ದಾರಿ 75ರ ಪೆರಿಯ ಶಾಂತಿಯಲ್ಲಿ 2008ರಲ್ಲಿ ಗ್ಯಾಸ್‌ ಟ್ಯಾಂಕರ್‌ ಮಗುಚಿ ಬಿದ್ದು, ಅನಿಲ ಸೋರಿಕೆ ಉಂಟಾಗಿತ್ತು. ಟ್ಯಾಂಕರ್‌ನಿಂದ ಅನಿಲ ಸೋರಿಕೆಯನ್ನು ತಡೆಗಟ್ಟಲು ಸಾಧ್ಯವಿರಲಿಲ್ಲ. ಆಗ ಅಗ್ನಿಶಾಮಕ ದಳದವರು ಟ್ಯಾಂಕರ್‌ ಮೇಲೆ ನಿರಂತರ ನೀರು ಹಾಯಿಸುವ ಮೂಲಕ ಟ್ಯಾಂಕರ್‌ ಸ್ಫೋಟವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರು.

ಈ ಪರಿಸರದ ನಾಲ್ಕು ಗ್ರಾಮಗಳಲ್ಲಿ ಕಾರ್ಯಾಚರಣೆ ಮುಗಿಯುವ ತನಕ ಯಾರೂ ತಮ್ಮ ಮನೆಗಳಲ್ಲಿ ಒಲೆ ಉರಿಸದಂತೆ ಎಚ್ಚರಿಕೆ ವಹಿಸಲಾಗಿತ್ತು. ಗ್ಯಾಸ್‌ ಟ್ಯಾಂಕರ್‌ ಖಾಲಿಯಾಗುವ ತನಕ ನೀರು ಹಾಯಿಸಲಾಗಿತ್ತು. ಇನ್ನೊಂದು ಟ್ಯಾಂಕರ್‌ಗೆ ಗ್ಯಾಸ್‌ ವರ್ಗಾಯಿಸುವ ಪ್ರಯತ್ನ ಕೂಡ ಇಲ್ಲಿ ಸಫಲವಾಗಿರಲಿಲ್ಲ.

ಕಣ್ಣೂರು ದುರಂತ

ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಕಳೆದ ವರ್ಷ ಗ್ಯಾಸ್‌ ಟ್ಯಾಂಕರ್‌ ಸ್ಫೋಟಗೊಂಡು 30 ಮಂದಿ ಸಾವನ್ನಪ್ಪಿದ ಭೀಕರ ಘಟನೆ ನಡೆದಿತ್ತು. ಗ್ಯಾಸ್‌ ಟ್ಯಾಂಕರ್‌ಗಳಿಂದಾಗಿ ಅನೇಕ ಅವಘಡಗಳು ಸಂಭವಿಸಿವೆ. ರಸ್ತೆ ಮಾರ್ಗದ ಬದಲು ಕೊಳವೆ ಮಾರ್ಗದಲ್ಲಿ ಅಥವಾ ರೈಲು ಮಾರ್ಗದ ಮೂಲಕ ಗ್ಯಾಸ್‌ ಸಾಗಾಟ ಪ್ರಯತ್ನಗಳು ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ.

ಎಚ್‌ಪಿಸಿಎಲ್‌ ನಿರ್ಲಕ್ಷ್ಯ ಧೋರಣೆ

ಹೆದ್ದಾರಿಯಲ್ಲಿ ಗ್ಯಾಸ್‌ ಟ್ಯಾಂಕರ್‌ಗಳ ಅವಘಡಗಳು ಸಂಭವಿಸಿದಾಗ ತುರ್ತು ನಿರ್ವಹಣೆಗಾಗಿ ಮಂಗಳೂರಿನಿಂದ ಎಚ್‌ಪಿಸಿಎಲ್‌ ತಂತ್ರಜ್ಞರು ಸ್ಥಳಕ್ಕೆ ಆಗಮಿಸಬೇಕಾಗುತ್ತದೆ. ತುರ್ತು ನಿರ್ವಹಣೆಗಾಗಿ ನೆಲ್ಯಾಡಿಯಲ್ಲಿ ಘಟಕವೊಂದನ್ನು ಆರಂಭಿಸುವಂತೆ ದ.ಕ. ಜಿಲ್ಲಾಡಳಿತ 3 ವರ್ಷಗಳ ಹಿಂದೆ ಶಿಫಾರಸು ಮಾಡಿದ್ದರೂ ಎಚ್‌ಪಿಸಿಎಲ್‌ ಇದರ ಅನುಷ್ಠಾನ ಮಾಡಿಲ್ಲ. ಪುತ್ತೂರು ಸಹಾಯಕ ಕಮಿಷನರ್‌ ಆಗಿದ್ದ ಡಾ| ಹರೀಶ್‌ ಕುಮಾರ್‌ ಗ್ಯಾಸ್‌ ಟ್ಯಾಂಕರ್‌ಗಳಿಂದ ಹೆದ್ದಾರಿಗಳಲ್ಲಿ ಉಂಟಾಗುತ್ತಿರುವ ಅನಾಹುತಗಳಿಗೆ ಸಂಬಂಧಪಟ್ಟಂತೆ ನೆಲ್ಯಾಡಿಯಲ್ಲಿ ತುರ್ತು ನಿರ್ವಹಣಾ ಘಟಕವನ್ನು ತೆರೆಯ ಬೇಕೆಂದು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದರು.

ಅನಿಲ ಟ್ಯಾಂಕರ್‌ ದುರಂತದಲ್ಲಿ ಮಡಿದವರಿಗೆ ತಲಾ 1 ಲಕ್ಷ ರೂ. ಪರಿಹಾರ

ಮಂಗಳೂರು : ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪ ಪೆರ್ನೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದ ಅನಿಲ ಟ್ಯಾಂಕರ್‌ ದುರಂತದಲ್ಲಿ ಮಡಿದವರಿಗೆ ತಲಾ ಒಂದು ಲಕ್ಷ ರೂಪಾಯಿಗಳ ಪರಿಹಾರವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹರ್ಷ ಗುಪ್ತ ಘೋಷಿಸಿದ್ದಾರೆ.

ಶೇ. 50ಕ್ಕಿಂತಲೂ ಹೆಚ್ಚು ಸುಟ್ಟು ಗಾಯಗೊಂಡ ವ್ಯಕ್ತಿಗೂ ತಲಾ ಒಂದು ಲಕ್ಷ ರೂ. ಗಳ ಪರಿಹಾರ ಹಾಗೂ ಶೇ. 50ಕ್ಕಿಂತಲೂ ಕಡಿಮೆ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರವನ್ನು ತತ್‌ಕ್ಷಣ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ. ಸಂಬಂಧಪಟ್ಟ ಅನಿಲ ಸರಬರಾಜು ಕಂಪೆನಿಯಿಂದಲೂ ಸಿಗಬೇಕಾದ ಎಲ್ಲ ಪರಿಹಾರವನ್ನು ಒದಗಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.

ಈ ಮನೆಗೆ ಇದು ಎರಡನೇ ದುರಂತ

ಉಪ್ಪಿನಂಗಡಿ : ಪೆರ್ನೆಯಲ್ಲಿ ಮಂಗಳವಾರ ಸಂಭವಿಸಿದ ಗ್ಯಾಸ್‌ ಟ್ಯಾಂಕರ್‌ ಅಗ್ನಿ ದುರಂತದ ಪರಿಣಾಮ ಧ್ವಂಸಗೊಂಡಿರುವ ಸುಂದರ ರೈ ಅವರ ಮನೆಗೆ ಬಂದೆರಗಿದ ಎರಡನೇ ದುರಂತವಿದು. ಮೊದಲ ದುರಂತದಲ್ಲಿ ಸುಂದರ ರೈ ಅವರ ತಾಯಿ ಮತ್ತು ತಂಗಿ ಮೃತಪಟ್ಟರೆ ಇಂದಿನ ದುರಂತದಲ್ಲಿ ಸುಂದರ ರೈ ಅವರ ಸಹೋದರನ ಪತ್ನಿ ಬಲಿಯಾಗಿದ್ದಾರೆ.

1998 ಆಗಸ್ಟ್‌ 15ರಂದು ಸುಂದರ ರೈ ಅವರ ಸಹೋದರ ಮತ್ತು ಸಹೋದರಿಯ ವಿವಾಹ ಸಮಾರಂಭ ಉಪ್ಪಿನಂಗಡಿಯ ಕಲ್ಯಾಣ ಮಂಟಪವೊಂದರಲ್ಲಿ ನಡೆದಿತ್ತು. ವಿವಾಹ ಸಮಾರಂಭ ಮುಗಿಸಿ, ನೂತನ ವಧೂವರರು ತೆರಳುತ್ತಿದ್ದ ಅಂಬಾಸಿಡರ್‌ ಕಾರಿಗೆ 34ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳಾರಿನಲ್ಲಿ ಗ್ಯಾಸ್‌ ಟ್ಯಾಂಕರ್‌ ಢಿಕ್ಕಿ ಹೊಡೆದ ಪರಿಣಾಮ ಸುಂದರ ರೈ ಅವರ ತಾಯಿ ಮತ್ತು ಮದುಮಗಳು ಸಹೋದರಿ ಮೃತಪಟ್ಟಿದ್ದರು.

ಈ ಆಘಾತದಿಂದ ಚೇತರಿಸಿಕೊಳ್ಳಲು ಈ ಕುಟುಂಬಕ್ಕೆ ಹಲವಾರು ವರ್ಷಗಳೇ ಬೇಕಾದವು. ಇಂದು ಗ್ಯಾಸ್‌ ಟ್ಯಾಂಕರ್‌ನಲ್ಲಿ ಅಗ್ನಿ ಸ್ಫೋಟಗೊಂಡು ಸುಂದರ ರೈ ಅವರ ಮನೆ ಧ್ವಂಸಗೊಂಡಿದೆ. ಸುಂದರ ರೈ ಅವರ ಸಹೋದರ ಮಂಗಳೂರಿನಲ್ಲಿ ಬಸ್‌ ಕಂಡಕ್ಟರ್‌ ಆಗಿರುವ ಶಂಕರ್‌ ರೈ ಅವರ ಪತ್ನಿ ಶೋಭಾ ರೈ ಬಟ್ಟೆ ಒಗೆಯುತ್ತಿದ್ದಾಗ ಹಠಾತ್‌ ಟ್ಯಾಂಕರ್‌ನಿಂದ ಬಂದೆರಗಿದ ಬೆಂಕಿಯ ಜ್ವಾಲೆಗೆ ಬಲಿಯಾಗಿದ್ದಾರೆ. ಶಂಕರ್‌ ರೈ ಅವರು ಈ ಸಂದರ್ಭ ಬೆಂಕಿಯ ಪ್ರಕೋಪ ಕಂಡು ಓಡಿ ಅಪಾಯದಿಂದ ಪಾರಾಗಿದ್ದಾರೆ. ಇವರ ಮಕ್ಕಳು ಅಂಗನವಾಡಿಗೆ ತೆರಳಿದ ಪರಿಣಾಮ ಬದುಕುಳಿದಿದ್ದಾರೆ. ಸುಂದರ ರೈ ಅವರ ಪತ್ನಿ ಮನೆಯೊಳಗಿದ್ದ ಇಂದಿರಾ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

ಸುಂದರ ರೈ ಅವರ ಮನೆಗೆ ಮಂಗಳವಾರದ ಗ್ಯಾಸ್‌ ಟ್ಯಾಂಕರ್‌ ಅವಘಡ ಮತ್ತೆ ಆಘಾತವಾಗಿ ಪರಿಣಮಿಸಿದೆ.

ಚತುಷ್ಪಥ ಇದಕ್ಕೆ ಪರಿಹಾರ

ಪುತ್ತೂರು : ರಾ.ಹೆ. 75ರಲ್ಲಿನ ಬಿ.ಸಿ.ರೋಡ್‌ - ಶಿರಾಡಿ ನಡುವೆ ಹೆದ್ದಾರಿಯನ್ನು ಚತುಷ್ಪಥಗೊಳಿಸುವುದೇ ಗ್ಯಾಸ್‌ ಟ್ಯಾಂಕರ್‌ಗಳ ಅಪಘಾತಗಳನ್ನು ನಿಯಂತ್ರಿಸಲು ಪರಿಹಾರವಾಗಬಹುದು. ಹಾಲಿ ದ್ವಿಪಥ ರಸ್ತೆಯಲ್ಲಿನ ವಾಹನ ದಟ್ಟಣೆಯ ಪರಿಣಾಮ ಮತ್ತು ಗ್ಯಾಸ್‌ ಟ್ಯಾಂಕರ್‌ಗಳ ಸಂಖ್ಯೆಯ ಹೆಚ್ಚಳ ಹಾಗೂ ಟ್ಯಾಂಕರ್‌ ಚಾಲಕರ ಆತುರದ ಚಾಲನೆ ಎಲ್ಲ ಅವಘಡಗಳಿಗೆ ಕಾರಣವಾಗಿದೆ.

ಗ್ಯಾಸ್‌ ಟ್ಯಾಂಕರ್‌ಗಳ ಮಿತಿಮೀರಿದ ವೇಗದ ಓಡಾಟಕ್ಕೆ ಕಡಿವಾಣ ಹಾಕಲು ಸಾರಿಗೆ ಮತ್ತು ಪೊಲೀಸ್‌ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಹಗಲು ಓಡಾಟಕ್ಕೆ ಅನುಮತಿ ನೀಡಿದರೂ ರಾತ್ರಿ ಓಡಾಟ ನಿರ್ಬಂಧಿಸಿದರೂ ಗ್ಯಾಸ್‌ ಟ್ಯಾಂಕರ್‌ಗಳ ನಾಗಾಲೋಟವನ್ನು ತಡೆಯಲು ಸಾಧ್ಯವಾಗುತ್ತಿಲ್ಲ.

ರಾ.ಹೆ. 75ರಲ್ಲಿ ಮಾಣಿ - ಶಿರಾಡಿ ನಡುವಣ ಖಾಲಿ ಗ್ಯಾಸ್‌ ಟ್ಯಾಂಕರ್‌ಗಳು ಅಥವಾ ತುಂಬಿದ ಟ್ಯಾಂಕರ್‌ಗಳು ಗರಿಷ್ಠ ಸಂಖ್ಯೆಯಲ್ಲಿ ಅಪಘಾತಕ್ಕೆ ಒಳಗಾಗುತ್ತಿವೆ. ಗ್ಯಾಸ್‌ ಟ್ಯಾಂಕರ್‌ಗಳ ಓಡಾಟ ನಿಯಂತ್ರಣಕ್ಕೆ ಶಿರಾಡಿ ಘಾಟಿ ಸಮಸ್ಯೆಯನ್ನು ಹೊರತುಪಡಿಸಿ, ಬಿ.ಸಿ.ರೋಡ್‌ - ಶಿರಾಡಿ ತನಕ ಹೆದ್ದಾರಿಯ ಚತುಷ್ಪಥ ಗೊಳಿಸುವುದೇ ಪರಿಹಾರವಾಗಿದೆ.

ಕ್ಲೀನರ್‌ ಇಲ್ಲ !

ಪುತ್ತೂರು : ಸಹಜವಾಗಿ ಲಾರಿಗಳಲ್ಲಿ ಮತ್ತು ಇತರ ಟ್ಯಾಂಕರ್‌ಗಳಲ್ಲಿ ಚಾಲಕ ಮತ್ತು ಕ್ಲೀನರ್‌ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ಗ್ಯಾಸ್‌ ಟ್ಯಾಂಕರ್‌ಗಳಲ್ಲಿ ಚಾಲಕರು ಮಾತ್ರ ಇರುತ್ತಾರೆ. ಕ್ಲೀನರ್‌ ಇರುವುದಿಲ್ಲ.

ರಸ್ತೆ ತಿರುವು, ರಸ್ತೆ ಅಂಚು ಮೊದಲಾದ ಸೂಚನೆಗಳನ್ನು ಚಾಲಕರಿಗೆ ಕ್ಲೀನರ್‌ ನೀಡುತ್ತಿರುತ್ತಾರೆ. ಆದರೆ ಗ್ಯಾಸ್‌ ಟ್ಯಾಂಕರ್‌ಗಳು ಕ್ಲೀನರ್‌ ರಹಿತವಾಗಿ ಆನೆ ನಡೆದದ್ದೇ ದಾರಿ ಎಂಬಂತೆ ವಾಹನ ಚಲಾಯಿಸುತ್ತಾರೆ.

ಗ್ಯಾಸ್‌ ಟ್ಯಾಂಕರ್‌ಗಳು ಅಪಘಾತಗೊಂಡರೆ ಅದರ ಚಾಲಕ ಸಾಯುತ್ತಾನೆ. ಇಲ್ಲದಿದ್ದರೆ ಸ್ಥಳದಿಂದ ಪರಾರಿಯಾಗುತ್ತಾನೆ. ಗ್ಯಾಸ್‌ ಟ್ಯಾಂಕರ್‌ಗಳ ಚಾಲಕರು ಶೇ. 80 ತಮಿಳುನಾಡಿನವರು. ಹೆಚ್ಚಿನ ವೇತನ ಮತ್ತು ಭತ್ಯೆಯ ಆಸೆಗಾಗಿ ಬಹುತೇಕ ಯುವ ಚಾಲಕರು ಗ್ಯಾಸ್‌ ಟ್ಯಾಂಕರ್‌ಗಳಿಗೆ ಸೇರುತ್ತಾರೆ.

ಯಾವುದೇ ಗ್ಯಾಸ್‌ ಟ್ಯಾಂಕರ್‌ಗಳು ಅಪಘಾತವಾದರೆ ಅದರ ಮಾಲಕರು ಇಲ್ಲಿಗೆ ಬರುವುದೇ ಇಲ್ಲ. ಸ್ಥಳೀಯವಾಗಿ ತಮ್ಮ ವ್ಯವಹಾರವನ್ನು ನೋಡಿಕೊಳ್ಳಲು ಏಜೆಂಟರನ್ನು ನೇಮಿಸಿರುತ್ತಾರೆ. ಮಾಲಕನಿಗೆ ವಾಹನದ ಬಾಡಿಗೆ ಮುಖ್ಯವೇ ಹೊರತು ತಾನು ನೇಮಿಸಿದ ಚಾಲಕನ ಅನುಭವ ಮತ್ತು ನೈಪುಣ್ಯತೆ ಅಗತ್ಯವಿರುವುದಿಲ್ಲ. ಆದ ಕಾರಣವೇ ಹೆದ್ದಾರಿಯಲ್ಲಿ ಅನನುಭವಿ ಚಾಲಕರ ಕಾರಣದಿಂದಾಗಿ ಗ್ಯಾಸ್‌ ಟ್ಯಾಂಕರ್‌ಗಳು ಅಪಘಾತಗೊಳ್ಳುತ್ತಲೇ ಇರುತ್ತವೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi