ಡೇಂಜರಸ್‌ ಎಟಿಎಂಗಳು!


ಉದಯವಾಣಿ, 20-11-2013 08:21:25


Write Comment     |     E-Mail To a Friend     |     Facebook     |     Twitter     |     Print





ಬೆಂಗಳೂರು: ಬ್ಯಾಂಕುಗಳ ಎಟಿಎಂ (ಎನಿ ಟೈಮ್‌ ಮನಿ) ಕೇಂದ್ರಗಳು ಸುರಕ್ಷಿತವಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ಇಷ್ಟು ದಿನ ಎಟಿಎಂ ಕೇಂದ್ರಗಳಲ್ಲಿ ಪಿನ್‌ ನಂಬರ್‌ ಪಡೆದು ವಂಚಿಸುವ, ಹಣ ಪಡೆದು ಹಿಂತಿರುಗುತ್ತಿದ್ದವರನ್ನು ದೋಚುವ, ಕಡೆಗೆ ಎಟಿಎಂ ಯಂತ್ರಗಳನ್ನೇ ಹೊತ್ತೂಯ್ಯುವ ಘಟನೆಗಳು ನಡೆದಿದ್ದವು. ಆದರೆ ಇದೀಗ ಹಣ ಪಡೆಯಲೆಂದು ಎಟಿಎಂ ಕೇಂದ್ರ ಪ್ರವೇಶಿಸಿದ ಅಮಾಯಕ ಮಹಿಳೆಯೊಬ್ಬರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಹಣ ದೋಚಲು ದುಷ್ಕರ್ಮಿಯೊಬ್ಬ ಯತ್ನಿಸಿರುವ ಘಟನೆ ರಾಜಧಾನಿಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ನಡೆದಿದೆ. ಈ ಕೃತ್ಯದ ಬಳಿಕ ಎಟಿಎಂಗಳಲ್ಲಿ ಹಣ ತೆಗೆಯುವವರು ಆತಂಕಗೊಳ್ಳುವಂತಾಗಿದೆ.

ಹಲಸೂರು ಗೇಟ್‌ ಪೊಲೀಸ್‌ ಠಾಣೆ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೇಂದ್ರ ಕಚೇರಿಗೆ ಕೂಗಳತೆ ದೂರದಲ್ಲೇ ಇರುವ, ಜನನಿಬಿಡ ಜೆ.ಸಿ. ರಸ್ತೆಯ ಎಲ್‌ಐಸಿ ಕಟ್ಟಡದ ಎಟಿಎಂ ಕೇಂದ್ರದಲ್ಲಿ ನಡೆದಿರುವ ಈ ಸಿನಿಮೀಯ ಘಟನೆಯಿಂದ ನಾಗರಿಕ ಸಮಾಜ ಭೀತಿಗೊಳಗಾಗಿದೆ.

ಕಾರ್ಪೋರೇಷನ್‌ ಬ್ಯಾಂಕ್‌ನ ವ್ಯವಸ್ಥಾಪಕಿ ಜ್ಯೋತಿ ಉದಯ್‌ ಎಂಬುವರು ದುಷ್ಕರ್ಮಿ ನಡೆಸಿದ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಚ್ಚಿನ ಏಟಿನಿಂದ ಅವರ ತಲೆಬುರುಡೆ ಒಡೆದಿದೆ ಎನ್ನಲಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಜ್ಯೋತಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಬೆಳಗ್ಗೆ 7.10ರ ವೇಳೆಗೆ ಈ ಘಟನೆ ನಡೆದಿದ್ದರೂ ಬೆಳಕಿಗೆ ಬಂದಿರುವುದು ಬೆಳಗ್ಗೆ 10ರ ಸುಮಾರಿಗೆ. ಹಣ ಡ್ರಾ ಮಾಡಲು ಎಟಿಎಂಗೆ ಬಂದ ಗ್ರಾಹಕರು, ರಕ್ತದ ಮಡುವಿನಲ್ಲಿದ್ದ ಜ್ಯೋತಿ ಅವರನ್ನು ಕಂಡು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕಾಗಮಿಸುವ ವೇಳೆಗೆ ಸಾರ್ವಜನಿಕರೇ ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹೇಗಾಯ್ತು?:
ರಾಜರಾಜೇಶ್ವರಿ ನಗರದ ನಿವಾಸಿ ಜ್ಯೋತಿ ಉದಯ್‌ ಅವರು ಮಿಷನ್‌ ರಸ್ತೆ ಬಳಿ ಇರುವ ಕಾರ್ಪೋರೇಷನ್‌ ಬ್ಯಾಂಕ್‌ (ಸರ್ವೀಸ್‌ ಬ್ರಾಂಚ್‌)ನ ಶಾಖಾ ವ್ಯವಸ್ಥಾಪಕರು. ಪ್ರತಿ ದಿನ ಮನೆಯಿಂದ ಬಿಎಂಟಿಸಿ ಬಸ್‌ನಲ್ಲಿ ಬಂದು ಕಾರ್ಪೋರೇಷನ್‌ ಬಸ್‌ ನಿಲ್ದಾಣದಲ್ಲಿಳಿದು ಅವರು ಕಚೇರಿಗೆ ಹೋಗುತ್ತಾರೆ. ಎಂದಿನಂತೆ ಮಂಗಳವಾರ ಉದ್ಯೋಗಕ್ಕೆ ತೆರಳಲು ಆಗಮಿಸಿದ ಅವರು, ಕಚೇರಿಗೆ ತೆರಳುವ ಮುನ್ನ ಹಣ ಪಡೆಯಲು ಎಲ್‌ಐಸಿ ಕಟ್ಟಡದಲ್ಲಿರುವ ತಮ್ಮ ಸಂಸ್ಥೆಯ (ಕಾರ್ಪೋರೇಷನ್‌ ಬ್ಯಾಂಕ್‌)ನ ಎಟಿಎಂ ಕೇಂದ್ರಕ್ಕೆ ಬೆಳಗ್ಗೆ 7.09ಕ್ಕೆ ತೆರಳಿದ್ದಾರೆ. ಆ ವೇಳೆ ಜ್ಯೋತಿಯವರನ್ನು ಹಿಂಬಾಲಿಸಿ ಬಂದ ದುಷ್ಕರ್ಮಿ ಏಕಾಏಕಿ ಎಟಿಎಂ ಕೇಂದ್ರಕ್ಕೆ ನುಗ್ಗಿ ಬಾಗಿಲು ಎಳೆದಿದ್ದಾನೆ. ಆಗುಂತಕನನ್ನು ಕಂಡು ಗಾಬರಿಗೊಂಡ ಜ್ಯೋತಿ ಅವರು, ಆತ ಎಟಿಎಂಗೆ ಒಳ ಪ್ರವೇಶಿಸಿದ್ದನ್ನು ಪ್ರಶ್ನಿಸಿದ್ದಾರೆ. ಆಗ ಹಣ ಡ್ರಾ ಮಾಡಿಕೊಡುವಂತೆ ಬಂದೂಕು ಹಾಗೂ ಮಚ್ಚು ತೋರಿಸಿ ದುಷ್ಕರ್ಮಿ ಆತ ಜೀವ ಬೆದರಿಕೆ ಹಾಕಿದ್ದಾನೆ. ಆದರೆ, ಹಣ ಡ್ರಾ ಮಾಡಿಕೊಡಲು ನಿರಾಕರಿಸಿ ರಕ್ಷಣೆಗೆ ಜನರನ್ನು ಕೂಗಿಕೊಳ್ಳಲು ಜ್ಯೋತಿ ಮುಂದಾದ ಕೂಡಲೇ, ಮಚ್ಚಿನಿಂದ ಆಕೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ತಲೆ ಹಾಗೂ ಮುಖಕ್ಕೆ ಗಂಭೀರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಜ್ಯೋತಿ ಅವರು ಕುಸಿದು ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗ್ಗೆ 10 ಗಂಟೆ ಸುಮಾರಿಗೆ ಹಣ ಡ್ರಾ ಮಾಡಿಕೊಳ್ಳಲು ಎಟಿಎಂಗೆ ಬಂದ ಸಾರ್ವಜನಿಕರಿಗೆ, ಎಟಿಎಂನಲ್ಲಿ ರಕ್ತದ ಕಲೆ ನೋಡಿ ಗಾಬರಿಯಾಗಿದೆ. ಕೂಡಲೇ ಅವರು ಬಾಗಿಲು ತೆಗೆದು ನೋಡಿದಾಗ ಎಟಿಎಂ ಕೇಂದ್ರದೊಳಗೆ ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದ ಜ್ಯೋತಿ ಕಂಡು ಆತಂಕಗೊಂಡಿದ್ದಾರೆ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆ ಹಾಗೂ ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ಜ್ಯೋತಿಯವರಿಗೆ ಚಿಕಿತ್ಸೆ ನೀಡಿದ ಬಳಿಕ, ಗಾಯಾಳು ಕುಟುಂಬದವರ ಇಚ್ಛೆಯಂತೆ ಹೆಚ್ಚಿನ ಚಿಕಿತ್ಸೆಗೆ ಕೆಂಗೇರಿ ಸಮೀಪದ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾವಲುಗಾರನಿಲ್ಲ:
ಈ ಎಟಿಎಂ ಕೇಂದ್ರಕ್ಕೆ ಕಾರ್ಪೋರೇಷನ್‌ ಬ್ಯಾಂಕ್‌ನವರು ಕಾವಲುಗಾರನನ್ನು ಕೂಡ ನೇಮಕ ಮಾಡಿಕೊಂಡಿಲ್ಲ. ಕೃತ್ಯ ಎಸಗಿದ ನಂತರ ಎಟಿಎಂ ಕೇಂದ್ರ ಬಾಗಿಲನ್ನು ಅರ್ಧಕ್ಕೆ ಎಳೆದು ಆರೋಪಿ ಪರಾರಿಯಾಗಿದ್ದರಿಂದ ಹಲ್ಲೆಗೊಳಗಾದ ಜ್ಯೋತಿ ಅವರು ಒಳಗೆ ನರಳುತ್ತಿದ್ದರೂ ಅದೇ ರಸ್ತೆಯಲ್ಲಿ ಸಂಚರಿಸಿದ ನಾಗರಿಕರ ಗಮನಕ್ಕೆ ಬಂದಿಲ್ಲ. ವಿಚಿತ್ರವೆಂದರೆ ಹಲಸೂರು ಗೇಟ್‌ ಪೊಲೀಸ್‌ ಠಾಣೆ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿ ಕೂಗಳತೆ ದೂರದಲ್ಲೇ ಈ ಎಟಿಎಂ ಕೇಂದ್ರವಿದೆ.

ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆ:
ಇಡೀ ಕೃತ್ಯ ಎಟಿಎಂ ಕೇಂದ್ರದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ, ಈ ದೃಶ್ಯಾವಳಿಗಳಲ್ಲಿ ಆರೋಪಿಯ ಮುಖಚರ್ಯೆ ಗುರುತು ಅಸ್ಪಷ್ಟವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಎಸ್‌.ಜೆ.ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಟಿಎಂಗೆ ಹೋಗುವ ವೇಳೆ ಎಚ್ಚರ ವಹಿಸಿ...
* ಎಟಿಎಂ ಪ್ರವೇಶಿಸುವ ಮುನ್ನ ಅದರ ಬಾಗಿಲಿಗೆ ಒಳಗಿನಿಂದ ಲಾಕ್‌ ಮಾಡುವ ಸೌಲಭ್ಯವಿದೆಯೇ ಎಂದು ಪರಿಶೀಲಿಸಿ
* ಕಾವಲುಗಾರರು ಇಲ್ಲದಿರುವ ಎಟಿಎಂಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಬಳಸಲೇಬೇಡಿ
* ಜನಸಂದಣಿ ಕಡಿಮೆ ಇರುವ ಕಡೆ ಒಬ್ಬಂಟಿಯಾಗಿ ಎಟಿಎಂ ಕೇಂದ್ರದೊಳಗೆ ಹೋಗದಿರಿ
* ಸಾಧ್ಯವಾದಷ್ಟೂ ಸ್ನೇಹಿತರು ಅಥವಾ ಪರಿಚಿತರ ಜತೆ ಹೋಗಿ ಹಣ ಡ್ರಾ ಮಾಡುವುದು ಸೂಕ್ತ
*ಅಪರಿಚಿತರು ಹಿಂಬಾಲಿಸುತ್ತಿದ್ದರೆ ಕೂಡಲೇ ಪೊಲೀಸರಿಗೆ ಕರೆ ಮಾಡಿ
* ರಾತ್ರಿ ವೇಳೆ ಎಟಿಎಂ ಕೇಂದ್ರಗಳಿಗೆ ಹೋಗದಿರುವುದು ಒಳಿತು, ಒಬ್ಬರಾಗಿ ಹೋಗಲೇಬೇಡಿ

ಹಣ ಡ್ರಾ ಮಾಡಿಕೊಳ್ಳಲು ಎಟಿಎಂ ಕೇಂದ್ರಕ್ಕೆ ಜ್ಯೋತಿ ಉದಯ್‌ ಅವರು ಆಗಮಿಸಿದ್ದಾಗ ದುಷ್ಕರ್ಮಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಈ ಘಟನಾವಳಿ ದೃಶ್ಯವು ಆ ಎಟಿಎಂನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಇದರ ಮಾಹಿತಿ ಮೇರೆಗೆ ಆರೋಪಿಯನ್ನು ಪತ್ತೆ ಹಚ್ಚಲಾಗುವುದು.
- ಡಾ.ಡಿ.ಸಿ.ರಾಜಪ್ಪ, ಪಶ್ಚಿಮ ವಿಭಾಗ ಡಿಸಿಪಿ

 

ಎಟಿಎಂಗಳಲ್ಲಿ ನಡೆವ ದುಷ್ಕೃತ್ಯಕ್ಕೆ ಬ್ಯಾಂಕುಗಳೇ ಹೊಣೆ: ಜಾರ್ಜ್‌

ಬೆಂಗಳೂರು: ಎಟಿಎಂ ಕೇಂದ್ರಗಳಲ್ಲಿ ನಡೆಯುವ ದುಷ್ಕೃತ್ಯಗಳಿಗೆ ಆಯಾ ಬ್ಯಾಂಕ್‌ಗಳೇ ನೇರ ಹೊಣೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ. ಮಂಗಳವಾರ ಕಾರ್ಪೋರೇಷನ್‌ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ನಡೆದ ಮಹಿಳೆ ಮೇಲಿನ ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಎಟಿಎಂ ಕೇಂದ್ರಗಳಿಗೆ ಬ್ಯಾಂಕ್‌ಗಳೇ ಭದ್ರತಾ ಸಿಬ್ಬಂದಿ ನೇಮಿಸಬೇಕು. ಎಟಿಎಂ ಕೇಂದ್ರಗಳಲ್ಲಿ ನಡೆಯುವ ಕಳ್ಳತನ ಸೇರಿದಂತೆ ಇತರೆ ದುಷ್ಕೃತ್ಯಗಳಿಗೆ ಬ್ಯಾಂಕ್‌ಗಳೇ ಹೊಣೆ ಹೊರಬೇಕು ಎಂದರು.

 

ನಗರದಲ್ಲಿರುವ ಎಲ್ಲಾ ಎಟಿಎಂ ಕೇಂದ್ರಗಳಿಗೆ ಪೊಲೀಸರು ರಕ್ಷಣೆ ನೀಡಲು ಸಾಧ್ಯವಿಲ್ಲ. ಅಪರಾಧಗಳು ನಡೆದ ಮೇಲೆ ಅವುಗಳನ್ನು ಪತ್ತೆ ಹಚ್ಚಬಹುದು. ಮಹಿಳೆ ಮೇಲೆ ಹಲ್ಲೆ ನಡೆಸಿದವರು ಯಾರೇ ಆದರೂ ಶೀಘ್ರ ಬಂಧಿಸಲಾಗುವುದು. ಇದಕ್ಕಾಗಿ ತಂಡವೊಂದನ್ನು ರಚಿಸಲಾಗಿದ್ದು, ಶೋಧಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ಸೆಕ್ಯೂರಿಟಿ ಗಾರ್ಡ್‌ಗಳು ಇಲ್ಲದಿರುವ ಎಟಿಎಂ ಕೇಂದ್ರಗಳನ್ನು ಮುಚ್ಚಲು ಬರುವುದಿಲ್ಲ. ಆದರೆ, ಈ ಬಗ್ಗೆ ಯಾವ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಪೊಲೀಸ್‌ ಆಯುಕ್ತರೊಂದಿಗೆ ಚರ್ಚಿಸಲಾಗುವುದು. ಜನರ ರಕ್ಷಣೆಯಲ್ಲಿ ಪೊಲೀಸರಿಗೆ ಇರುವ ಜವಾಬ್ದಾರಿಯಂತೆ ಬ್ಯಾಂಕ್‌ ಮತ್ತು ಎಟಿಎಂ ಕೇಂದ್ರಗಳಲ್ಲಿನ ಹಣ ಹಾಗೂ ಗ್ರಾಹಕರ ರಕ್ಷಣೆಯಲ್ಲಿ ಬ್ಯಾಂಕ್‌ಗಳಿಗೂ ಜವಾಬ್ದಾರಿ ಇರಬೇಕು ಎಂದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Udupi hosts its first ever national level dragon b
View More

Now Open - Namma Minimart, Santhekatte - Kemmanunu Cross, - Call for Home Delivery 9611175167Now Open - Namma Minimart, Santhekatte - Kemmanunu Cross, - Call for Home Delivery 9611175167
Final Journey of Rosy Fernandes (85 years) | LIVE From KallianpuraFinal Journey of Rosy Fernandes (85 years) | LIVE From Kallianpura
Final Journey of Juliana Rodrigues (81 Years) | LIVE From ThottamFinal Journey of Juliana Rodrigues (81 Years) | LIVE From Thottam
Wee Care Play Home Badanidiyoor | 3rd Annual day CelebrationWee Care Play Home Badanidiyoor | 3rd Annual day Celebration
Lourdsachi Zar - December Issue from Our Lady of Lourdes church, Kanajar, Udupi.Lourdsachi Zar - December Issue from Our Lady of Lourdes church, Kanajar, Udupi.
Milarchi-Lara-from-Milagres-Cathedral-Kallianpur-January-2023-IssueMilarchi-Lara-from-Milagres-Cathedral-Kallianpur-January-2023-Issue
KPL Super League • Cricket | LIVE from KemmannuKPL Super League • Cricket | LIVE from Kemmannu
Milarchi Lara Bulletin - Monthi Fest Issue, September 2022Milarchi Lara Bulletin - Monthi Fest Issue, September 2022
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi